Sunday, June 25, 2017

ಮುಗಿಯದ ದಾಸ್ಯ, ಅಳಿಯಲು ಅಳುಕುವ ಬೌದ್ಧಿಕ ಅಂಧಕಾರ

ಭಾರತದ ಮೂಲ ಸಂಸ್ಕೃತಿ ಹಾಗೂ ನಾಗರಿಕತೆ ಮೇಲೆ ಶತ-ಸಹಸ್ರಮಾನಗಳ ಹಲ್ಲೆ, ಹೇರಿಕೆ, ನಾಶ, ಲೂಟಿಯ ನಂತರ ಇತ್ತೀಚೆಗಷ್ಟೇ ಸ್ವತಂತ್ರವಾದ ನಮ್ಮ ದೇಶದ ಭವಿಷ್ಯವಾದ ಮಕ್ಕಳ ಪುಸ್ತಕಗಳ ರಚನೆಯಲ್ಲಿ ಕಾಣಸಿಗುವ ಮಾನಸಿಕ ದಾಸ್ಯದ ಕುರುಹುಗಳು ನೋಡಿ! ೧೯೯೬ನೇ ಇಸವಿಯಲ್ಲಿ ವಿಶ್ವ ಬಾಂಕ್ ರಾಜಸ್ಥಾನದಲ್ಲಿ ನಡೆಸಿದ ಎರಡು ದಶಕಕ್ಕೂ ಹಳೆಯ ಒಂದು ಸ್ಥಳಾಧ್ಯಯನ ದ್ವಿತೀಯ ಪದವಿ ಪೂರ್ವ ತರಗತಿ ಸಮಾಜಶಾಸ್ತ್ರ ಪಠ್ಯಪುಸ್ತಕದ ಐದನೇ ಅಧ್ಯಾಯ “ಗ್ರಾಮಗಳ ಬದಲಾವಣೆ, ಅಭಿವೃದ್ಧಿ ಮತ್ತು 
ಭಾರತದಲ್ಲಿ ನಗರೀಕರಣ” ಎನ್ನುವ ಒಂದು ಅಧ್ಯಾಯವನ್ನು ತಿದ್ದುವಾಗ ಕಂಡುಬಂದ ಸಾಲುಗಳ ಮುದ ನೀಡಿದ ಸಂಗತಿ!

ಜಾಗತಿಕ ಬ್ಯಾಂಕ್ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ರಾಜಸ್ಥಾನದ ಏಳು ಜಿಲ್ಲೆಗಳಲ್ಲಿ ನಡೆಸಿದ ಕ್ಷೇತ್ರಾಧ್ಯಯನದ ಗ್ರಾಮೀಣ ಕ್ಷೇತ್ರಗಳಲ್ಲಿ 
ಬಡತನಕ್ಕೆ ಕಾರಣಗಳನ್ನು ಈ ಕೆಳಗಿನಂತೆ ಗುರುತಿಸಿದೆ. ಅವುಗಳೆಂದರೆ: 
೧. ಬಡತನ ನಿರ್ಮೂಲನ ಕಾರ್ಯಕ್ರಮಗಳ ಅಸಮರ್ಪಕ ಅನುಷ್ಟಾನ 

೨. ಕೃಷಿಯೇತರ ವೃತ್ತಿಗಳಲ್ಲಿ ಸೀಮಿತ ಜನರು ಪಾಲ್ಗೊಳ್ಳುತ್ತಿರುವುದು.
೩. ನೀರಾವರಿ ಸೌಲಭ್ಯಗಳ ಅಲಭ್ಯತೆ ಮತ್ತು ಕಡಿಮೆ ಮಳೆ ಸುರಿಯುವುದು.

೪. ಪಾರಂಪರಿಕ ವ್ಯವಸಾಯದ ಮೇಲಿನ ಅವಲಂಬನೆ ಮತ್ತು ಸಮರ್ಪಕ ಆಧುನಿಕ ಕೌಶಲ್ಯಗಳ ಕೊರತೆ.

೫. ಕೃಷಿ ಮಾಡಲು ವಿದ್ಯುಚ್ಛಕ್ತಿಯ ಅಲಭ್ಯತೆ 

೬. ಗುಣಮಟ್ಟವಿಲ್ಲದ ಜಾನುವಾರುಗಳ ಸಾಕಾಣಿಕೆ. 

೭. ಅಪೂರ್ಣ ಮತ್ತು ಶೋಷಿತ ಸಾಲದ ಮಾರುಕಟ್ಟೆ ಸಂವಹನ ಸೌಲಭ್ಯಗಳು ಮತ್ತು ಮಾರುಕಟ್ಟೆಗಳು. ಸಾಲ 
ಸೌಲಭ್ಯದ ಕೊರತೆ ಮಾರುಕಟ್ಟೆಯಲ್ಲಿ ಆಗುವ ಶೋಷಣೆ ಮತ್ತು ಸಾರಿಗೆ-ಸಂಪರ್ಕದ ಕೊರತೆ. 

೮. ಗುಣ ಮಟ್ಟದ ಶಿಕ್ಷಣದ ಕೊರತೆ.
೯. ಸಮುದಾಯ ನಾಯಕತ್ವದ ಕೊರತೆ.
೧೦. ಅಭಿವೃದ್ಧಿ ಚಟುವಟಿಕೆಯಲ್ಲಿ ಮಹಿಳಾ ಸಹಕಾರದ ಕೊರತೆ ಮತ್ತು ಯೋಜಿತ ಕಾರ್ಯಕ್ರಮದಲ್ಲಿ ಅವರ 
ಮಹಿಳೆಯರ ಬಗ್ಗೆ ತಾತ್ಸಾರದ ದೃಷ್ಠಿ.

೧೧. ಅಂತರ್ ಜಾತಿ ಸಂಘರ್ಷಗಳು ಮತ್ತು ಪ್ರತಿಸ್ಪರ್ಧೆಗಳು 

೧೨. ವಿವಾಹ, ತಿಥಿ, ಮುಂಜಿ, ಹಬ್ಬ, ಹರಿದಿನ ಮುಂತಾದ ಅನುತ್ಪಾದಕ ಕಾರ್ಯಗಳಿಗೆ ದುಂದು ವೆಚ್ಚ ಮಾಡುವುದು. 


ಖಂಡಿತ ಮದುವೆ, ಮುಂಜಿ, ತಿಥಿ ಹಬ್ಬ ಹರಿದಿನ ಮಾಡಿಕೊಳ್ಳಬೇಡಿ! ಸ್ವಾನುಭವ - ಮದುವೆ ಒಂದನ್ನು ಬಿಟ್ಟು! ಹಾಗೆ ಕುಡಿದು ತೇಲಾಡೋ ನಮ್ಮ ಹಳ್ಳಿಯ ಗಂಡಸರು ಈ ಸಮಸ್ಯೆ ಪಟ್ಟಿಯಲ್ಲಿ ಬಹುಶಃ ತಪ್ಪಿಸಿಕೊಂಡಿರುವುದಕ್ಕೆ ಕಾರಣ ಅಧ್ಯಯನ ತಂಡ ಬಂದಾಗ ಅವ್ರು ಬಾರ್ ಗಳಲ್ಲಿ ತಣ್ಣಗಾಗಿದ್ರು ಅನ್ನಿಸುತ್ತೆ. ಅಥವಾ ಆ ವಿಶ್ವ ಬ್ಯಾಂಕ್ ತಂಡ ಕೂಡ ಅವರೊಟ್ಟಿಗೆ ಸೇರಿ ಎಣ್ಣೆ ಹಾಕಿಕೊಂಡು ಸುಮ್ಮನಾಗಿರಬೇಕು. ಅನಿವಾಸಿ ಭಾರತೀಯರೊಬ್ಬರು (ನನ್ನ ಪೂರ್ವಾರ್ಜಿತ ಕರ್ಮ!) ಇಲ್ಲಿ ಲೀಡ್ಸ್ ನಲ್ಲಿ ಭಾರತದ ಬಗ್ಗೆ ವಿವರಿಸುತ್ತಾ “ನಮ್ಮಲ್ಲಿ ಗುಂಡು ಹಾಕುವಾಗ cheers ಎನ್ನುವುದು ಹಿಂದಿನಿಂದ ಬಂದ ಸಂಪ್ರದಾಯ ಅಂದಾಗ ಜೀವನದಲ್ಲೀ ಕುಡಿಯದ ನನಗೆ ಕಿಕ್ಕು ಅಂದ್ರೆ ಏನು ಅಂತ ತಿಳಿದ ಸುದಿನ! ನಮ್ಮಲ್ಲಿ ಕುಡಿತ ಇಲ್ಲ ಅಂತ ಅಲ್ಲ, ಆಂಗ್ಲರು ಬಿಟ್ಟು ಹೋದ ತಂಗಳು ಇನ್ನೂ ನಮ್ಮ ದೇಶದ ಸಾಮೂಹಿಕ ತಿಳುವಳಿಕೆಗೆ ತಂಗಳು ಪೆಟ್ಟಿಗೆಯಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಅದೇ ಹಳಸಲು ಆಮದು ಹೆಂಡವನ್ನೇ ನಾವು ಆಹಾರ ಅಂದುಕೊಂಡು ೭೦ ವರ್ಷಗಳ ಕಾಲ ನಮ್ಮ ಜನಾಂಗಕ್ಕೆ ಉಣಬಡಿಸಿದ್ದೇವೆ! ಆ ಕುಡಿತದ ಅಮಲಿನಲ್ಲಿರುವ ನಮ್ಮ ದೇಶದ ತೇಲಾಡುವ ಸತ್ಪ್ರಜೆಗಳ ಹೆಂಡದ ಲೋಟಗಳಿಂದ ಚಿಮ್ಮಿದ ಒಂದೆರಡು ಹೆಂಡದ ಹುಳಿ ಹನಿಗಳ ರುಚಿ ನೋಡಿ!